ಮಂಗಳೂರು: ಭವಿಷ್ಯದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವು ನಮಗೆ ಅನುಕೂಲವಾಗಿರಬೇಕಾದಲ್ಲಿ ಪ್ರಕೃತಿ ಸಂರಕ್ಷಣೆಯ ಜಾಗೃತಿಯು ಮಕ್ಕಳಿಗೆ ನಮ್ಮ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೆಡರೇಶನ್ ನ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಶಶಿಧರ್ ಶೆಟ್ಟಿ ಅಭಿಪ್ರಾಯಿಸಿದರು.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಮಂಗಳೂರು ಶಾಖೆಯ ವತಿಯಿಂದ ನಗರದ ಹಿದಾಯತ್ ಸೆಂಟರ್ ನ ಸಭಾಂಗಣದಲ್ಲಿ ‘ಗ್ರೀನ್ ಫೂಟ್ ಪ್ರಿಂಟ್ಸ್(ಸ್ಟಾರ್ಟ್ ಮೇಕ್ ಎ ಡಿಫರೆನ್ಸ್) ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಸಿದ ಪರಿಸರ ಸಂರಕ್ಷಣಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ವರ್ಷಕ್ಕೊಂದಾದರೂ ಗಿಡ ನೆಡುವ ಅಭ್ಯಾಸ ಇರಬೇಕು. ಆ ಮೂಲಕ ಪ್ರಕೃತಿಯ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು.
ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಂಡು, ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು.
ಈ ಮೂಲಕ ನಾವು ಸುಸ್ಥಿರ ಭಾರತವನ್ನು ಕಟ್ಟುವವರಾಗಬೇಕು. ಪರಿಸರವನ್ನು ಹಾಳು ಮಾಡುವ ಬೃಹತ್ ಕಂಪನಿಗಳ ವಿರುದ್ಧ ಎದೆಗುಂದದೆ ನಿರಂತರ ಹೋರಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪರಿಸರ ರಕ್ಷಣಾ ಅಭಿಯಾನದ ಲೋಗೋವನ್ನು ಬಿಡುಗಡೆ ಮಾಡಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ.ಎಂ. ಅಶ್ರಫ್, ಎಸ್ ಐ ಓ ದ.ಕ. ಜಿಲ್ಲಾಧ್ಯಕ್ಷ ರಿಝ್ವಾನ್ ಅಝ್ಹರಿ, ಮಂಗಳೂರು ನಗರಾಧ್ಯಕ್ಷ ಇರ್ಷಾದ್ ವೇಣೂರು ಉಪಸ್ಥಿತರಿದ್ದು, ಮಾತನಾಡಿದರು.

ಪರಿಸರ ಅಭಿಯಾನದ ಸಂಚಾಲಕ ಅಮ್ಮಾರ್ ಅಹ್ಸನ್ ಸ್ವಾಗತಿಸಿದರು. ರುಮಾನ್ ಕುದ್ರೋಳಿ ಕಿರಾಅತ್ ಪಠಿಸಿದರು. ಎಸ್ ಐ ಓ ಕಾರ್ಯಕರ್ತ ರಾಹಿಲ್ ಕುದ್ರೋಳಿ ನಿರೂಪಿಸಿದರು.